ಮುಖ್ಯಮಂತ್ರಿ ಸಿದ್ದರಾಮಯ್ಯ -ಕನಕದಾಸರ ಕಂಚಿನ ಪ್ರತಿಮೆಯ ಅನಾವರಣ

ಕನಕದಾಸರ ತತ್ವಾದರ್ಶಗಳು ಇಂದಿನ ಅಗತ್ಯ ಮನುಷ್ಯರು, ಮನುಷ್ಯರನ್ನು ಪ್ರೀತಿಸುವಂತಾಗಬೇಕು
ಜಾತಿರಹಿತ, ವರ್ಗರಹಿತ, ವೈಚಾರಿಕೆತೆಯ ಸಮಾಜ ನಿರ್ಮಾಣವಾಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ

ಜೀವಕ್ಕೆ ಯಾವ ಕುಲವಿದೆ, ನಮ್ಮ ಶರೀರದಲ್ಲಿನ ರಕ್ತಕ್ಕೆ ಯಾವ ಜಾತಿಯ ಲೇಪನವೂ ಇಲ್ಲ, ತುರ್ತು ಸಂದರ್ಭದಲ್ಲಿ ಬದುಕಲು ಯಾರ ರಕ್ತವನ್ನಾದರೂ ಪಡೆದು ನಮ್ಮ ಜೀವ ಉಳಿಸಿಕೊಳ್ಳುತ್ತೇವೆ ಈ ನಿಟ್ಟಿನಲ್ಲಿ ಮನುಷ್ಯರು ಮನುಷ್ಯರನ್ನು ಪ್ರೀತಿಸಬೇಕೆಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹೇಳಿದರು.

ಅವರು ಶನಿವಾರ ಹೊನ್ನಾಳಿ ಪಟ್ಟಣದಲ್ಲಿ ಸ್ಥಳೀಯ ಕುರುಬ ಸಮಾಜದಿಂದ ಟಿ.ಬಿ.ವೃತ್ತದ ಬಳಿ ನಿರ್ಮಾಣ ಮಾಡಲಾದ ಕನಕದಾಸರ ಕಂಚಿನ ಪ್ರತಿಮೆಯನ್ನು ಅನಾವರಣ ಮಾಡಿ ಸಮಾರಂಭದಲ್ಲಿ ಮಾತನಾಡಿದರು. ಕುರುಬ ಸಮಾಜ ಹಾಗೂ ಇತರೆ ಎಲ್ಲರೂ ಸೇರಿ ಕನಕದಾಸರ ಪ್ರತಿಮೆ ಸ್ಥಾಪಿಸುವ ಕಾರ್ಯ ಮಾಡಿದ್ದಾರೆ. ದಾಸಶ್ರೇಷ್ಟ ಕನಕದಾಸರ ಪ್ರತಿಮೆ ಲೋಕಾರ್ಪಣೆ ಮಾಡಿದ್ದೇನೆ ಎಂದರು.
ಕನಕದಾಸರು ಆಕಸ್ಮಿಕವಾಗಿ ಕುರುಬ ಜಾತಿಯಲ್ಲಿ ಹುಟ್ಟಿದರು, ಆದರೆ ಕುರುಬರಾಗಿ ಉಳಿದಿರಲಿಲ್ಲ, ವಿಶ್ವಮಾನವರಾಗಿದ್ದರು. ಆದರೆ ನಾವುಗಳು ಹುಟ್ಟಿದಾಗ ವಿಶ್ವಮಾನವರಾಗುತ್ತೇವೆ, ಕೊನೆಯಲ್ಲಿ ಅಲ್ಪಮಾನವರು. ಆದರೆ ಬುದ್ದ, ಬಸವ, ಕನಕ, ಅಂಬೇಡ್ಕರ್, ಗಾಂಧೀಜಿ ಇವರೆಲ್ಲಾ ಜನರಿಗೆ ನೀಡಿದ ಸಂದೇಶ ವಿಶ್ವ ಮಾನವರಾಗಲು, ನಾವೆಲ್ಲರೂ ಮನುಷ್ಯರಾಗಲು ಪ್ರಯತ್ನ ಮಾಡಿ ದ್ವೇಷಿಸದೇ, ಪರಸ್ಪರ ಪ್ರೀತಿಸೋಣ ಎಂದರು.
ಬಸವಾದಿ ಶರಣರು, ಕನಕದಾಸರು ಹೇಳಿದ್ದು ಜಾತಿ ರಹಿತ, ವರ್ಗ ರಹಿತ ಸಮಾಜ ನಿರ್ಮಾಣದ ತತ್ವವನ್ನು ಸಾರಿದರು. ಇದನ್ನು ಅರಿಯಲು ವಚನಗಳು ಮತ್ತು ಕೀರ್ತನೆಗಳನ್ನು ಓದಲು ಮುಂದಾಗಬೇಕು.
ಕನಕದಾಸರ ಪ್ರಮುಖ ಕಾವ್ಯ ಕೃತಿಗಳಾದ ಮೋಹನತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತ್ರೆ, ಹರಿಭಕ್ತಿಸಾರ ಇವುಗಳನ್ನು ಜನರು ಓದಬೇಕು. ರಾಮಧಾನ್ಯ ಭಾಮಿನಿ ಷಟ್ಪದಿಯಲ್ಲಿದ್ದು ಕಾಯಕ ದಾಸೋಹದ ಉಲ್ಲೇಖ ಇದರಲ್ಲಿ ಸಿಗುತ್ತದೆ. ಅಕ್ಕಿ ಮತ್ತು ರಾಗಿಯಲ್ಲಿ ಯಾವುದು ಹೆಚ್ಚು ಮಹತ್ವತೆಯನ್ನು ಹೊಂದಿದೆ ಎಂದು ಇದರ ಸಾರಾಂಶವಾಗಿದ್ದು ರಾಗಿಯ ಮಹತ್ವತೆಯ ಬಗ್ಗೆ ಸಂಪೂರ್ಣ ಉಲ್ಲೇಖವಿದೆ ಎಂದರು.
ಕನಕದಾಸರು ಸಮಾಜ ಸುಧಾರಕ, ದಾರ್ಶನಿಕ, ವಿಶ್ವಮಾನವ, ನಾವೆಲ್ಲರೂ ಇವರ ತತ್ವಾದರ್ಶ ಆರ್ಥ ಮಾಡಿಕೊಳ್ಳಲಿ ಎಂದು ಇಂತಹ ಪ್ರತಿಮೆಗಳ ಅನಾವರಣ ಮಾಡುವ ಕೆಲಸ ಮಾಡಲಾಗುತ್ತಿದೆ. ಇವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಇದರ ಸಾರ್ಥಕತೆಯಾಗುತ್ತದೆ ಎಂದರು.
ಮುಖ್ಯಮಂತ್ರಿಗಳು ಇದಕ್ಕೂ ಮೊದಲು ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಶಾಸಕರಾದ ಡಿ.ಜಿ.ಶಾಂತನಗೌಡ, ಕೆ.ಎಸ್.ಬಸವಂತಪ್ಪ, ವಿಧಾನ ಪರಿಷತ್ ಸದಸ್ಯರಾದ ಕೆ.ಅಬ್ದುಲ್ ಜಬ್ಬರ್, ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್, ಮಾಜಿ ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಆರ್.ಪ್ರಸನ್ನಕುಮಾರ್, ಇನ್‍ಸೈಟ್ ವಿನಯ್‍ಕುಮಾರ್, ಮುಖಂಡರಾದ ಮಂಜಪ್ಪ, ಜಯಸಿಂಹ, ಸುಭಾಶ್ಚಂದ್ರ, ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ಎಂ.ಎಸ್.ಫಾಲಾಕ್ಷಪ್ಪ ಹಾಗೂ ಇನ್ನಿತರೆ ಸಮಾಜದ ಮುಖಂಡರು ಉಪಸ್ಥಿತರಿದ್ದರು. ಸಿದ್ದಪ್ಪ ಸ್ವಾಗತಿಸಿದರು.

Leave a Reply

Your email address will not be published. Required fields are marked *